ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮಾಜಿ ಬ್ರಿಟಿಷರ ವಿರುದ್ಧ ಮೊದಲ ದಿಗ್ವಿಜಯ ಸಾಧಿಸಿದ್ದಕ್ಕೆ ಮುಂದಿನ ವರ್ಷ 200 ವರ್ಷ ತುಂಬಲಿದೆ.
ಆ ವೇಳೆ, ಕಿತ್ತೂರು ಉತ್ಸವ ರಾಷ್ಟ್ರಮಟ್ಟದ ಉತ್ಸವ ಆಗಬೇಕು ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಕಿತ್ತೂರು ಉತ್ಸವದಲ್ಲಿ ಆಗ್ರಹಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ವರ್ಷ ನಡೆಯಲಿರುವ ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವವಾಗಿ ಘೋಷಿಸಬೇಕು. ಪಾರ್ಲಿಮೆಂಟ್ ಮುಂದೆ ಚನ್ನಮ್ಮ ಮತ್ತು ಬಸವಣ್ಣನವರ ಮೂರ್ತಿ ಇದೆ. ಆದರೆ, ಗೌರವ ಸಿಗ್ತಿಲ್ಲ. ಮುಂದಿನ ವರ್ಷ ಇಬ್ಬರು ಮಹಾನ್ ನಾಯಕರಿಗೆ ಪ್ರಧಾನಮಂತ್ರಿ ಮಾಲಾರ್ಪಣೆ ಮಾಡಿ ಗೌರವ ಕೊಡಬೇಕು. ಮುಖ್ಯಮಂತ್ರಿಗಳು ಬೇರೆ ಯಾವುದೇ ಉತ್ಸವ ತಪ್ಪಿಸಿದ್ರೂ ಪರವಾಗಿಲ್ಲ. ಕಿತ್ತೂರು ಉತ್ಸವಕ್ಕೆ ಬಂದು ಹೋಗುವ ಕೆಲಸವನ್ನ ಮಾಡಲಿ. ಮುಂದಿನ ವರ್ಷ ನಡೆಯುವ ಎರಡನೂರು ವರ್ಷದ ಉತ್ಸವಕ್ಕೆ ಈಗಿನಿಂದಲೇ ಸಭೆ ಕರೆದು ಚರ್ಚೆ ಮಾಡಲಿ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗತವೈಭವ ಮರಳುವಂತೆ ಮಾಡಲು ಕ್ರಮ – ಸಚಿವರ ಭರವಸೆ: ಬಳಿಕ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಕಳೆದ 25 ವರ್ಷಗಳಿಂದ ಉತ್ಸವ ಆಚರಿಸಲಾಗುತ್ತಿದೆ. ಬಂಗಾರಪ್ಪ ಅವರ ಕಾಲದಿಂದ ಸಣ್ಣದಾಗಿ ಆರಂಭವಾಗಿ ಇಂದು ರಾಜ್ಯದ ಮನೆ ಮಾತಾಗಿದೆ. ಐತಿಹಾಸಿಕ ಕಿತ್ತೂರು ಕೋಟೆ ಮತ್ತೆ ಗತವೈಭವದಿಂದ ಮೆರೆಯುವಂತೆ ಮಾಡಬೇಕು. ವಿವಿಧ ಇಲಾಖೆಯಿಂದ ಅನುದಾನ ತಂದು ಅಭಿವೃದ್ಧಿ ಪಡಿಸುತ್ತೇವೆ. ಲೋಕೋಪಯೋಗಿ ಇಲಾಖೆಯಿಂದ ಈ ವರ್ಷ 5 ಕೋಟಿ ಕಿತ್ತೂರಿನ ಅಭಿವೃದ್ಧಿಗೆ ನೀಡುತ್ತೇವೆ. ಪ್ರತಿವರ್ಷವೂ 5 ಕೋಟಿ ರೂ ಸರ್ವಾಂಗೀಣ ಅಭಿವೃದ್ಧಿಗೆ ನೀಡುತ್ತೇವೆ. ನಂದಗಡ, ಅಮಟೂರ, ಹಲಸಿ, ಸಂಗೊಳ್ಳಿ ಒಂದು ಪ್ರವಾಸಿ ಸ್ಥಳ ಮಾಡ್ತೇವೆ. ಕಿತ್ತೂರು ರಾಜ್ಯಕ್ಕೆ ಅಲ್ಲಾ ದೇಶಕ್ಕೆ ಮಾದರಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ರಾಣಿ ಚನ್ನಮ್ಮನ ಇತಿಹಾಸವನ್ನು ಮೂರು ದಿನಗಳಿಗೆ ಸೀಮಿತ ಮಾಡದೇ ವಿಚಾರ ಸಂಕಿರಣಗಳನ್ನು ಮಾಡಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ನೆನಪು ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಾಂಸ್ಕೃತಿಕ ಗಟ್ಟಿ ನೆಲೆಯನ್ನ ನಿರ್ಮಿಸಿಬೇಕಿದೆ. ಬರುವ 200ನೇ ವರ್ಷಕ್ಕೆ ನಾಡ ಉತ್ಸವವಾಗದೇ ರಾಷ್ಟ್ರೀಯ ಉತ್ಸವಾಗಿ ಪರಿವರ್ತನೆ ಆಗಬೇಕು. ಝಾನ್ಸಿ ರಾಣಿಗಿಂತ ಮೊದಲು ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದಿದ್ದರು. ಕಿತ್ತೂರು ಉತ್ಸವ ರಾಷ್ಟ್ರೀಯ ಉತ್ಸವ ಮಾಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.
Laxmi News 24×7