ಬೆಳಗಾವಿ: ಈ ಬಜೆಟ್ ಪ್ರಣಾಳಿಕೆ ಬಜೆಟ್ ಎಂದು ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಅವರದ್ದು ಹಿಂದಿನ ಬಜೆಟ್ ಹಾಗೇ ಆಗಿದ್ದರೆ, ನಮ್ಮದು ಹಾಗೇ ಅಂದುಕೊಳ್ಳಲಿ ಎಂದಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ವಿಕ್ಷಪದವರಿಂದ ಟೀಕೆ ಸ್ವಾಭಾವಿಕ. ಆದರೆ, ಬಜೆಟ್ ಬಗ್ಗೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ರಾಜಕೀಯ ಮಾಡುವುದಕ್ಕಾಗಿ ವಿಪಕ್ಷದವರು ವಿರೋಧ ಮಾಡ್ತಾರೆ. ಸರ್ಕಾರದ ಗ್ಯಾರಂಟಿ ಯೋಜನೆಗೆ ಅನುದಾನ ಕೊಟ್ಟು, ಹೊಸ ಯೋಜನೆ ಘೋಷಣೆ ಮಾಡಲಾಗಿದೆ. ವಿಪಕ್ಷದವರ ಟೀಕೆಗೆ ಮಹತ್ವ ಕೊಡಬೇಕಿಲ್ಲ. ಈ ಬಜೆಟ್ ಸರ್ಕಾರಕ್ಕೆ, ಪಕ್ಷಕ್ಕೆ ಅನುಕೂಲ ಆಗಲಿದೆ. ಬಜೆಟ್ ಪರಿಣಾಮ ಎಂಪಿ ಎಲೆಕ್ಷನ್ ವರೆಗೂ ಕಾದು ನೋಡೋಣ. ಅವರದ್ದಾಗಲಿ, ನಮ್ಮದಾಗಲಿ ಬಜೆಟ್ ಅನ್ನು ಅಧಿಕಾರಿಗಳು ಮಾಡ್ತಾರೆ. ಅಬಕಾರಿ ಸುಂಕ ಹೆಚ್ಚಳ ವಿಚಾರದ ಬಗ್ಗೆ ಮಾತನಾಡಿ, ಪ್ರತಿಭಟನೆ ಮಾಡದ ಏಕೈಕ ಇಲಾಖೆ ಎಂದರೆ ಅದು ಅಬಕಾರಿ, ಇದು ಒಂಥರ ವಿಚಿತ್ರ ಇಲಾಖೆ, ಶೇ.20ರಷ್ಟು ಮಾತ್ರ ನಾವು ತೆರಿಗೆ ಹೆಚ್ಚಿಸಿದ್ದೇವೆ. ಗೋವಾ ಬಿಟ್ಟು ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿಯೇ ಮದ್ಯದ ದರ ಕಡಿಮೆಯಿದೆ ಎಂದು ಹೇಳಿದರು.
ಲೋಕಸಭೆಗೆ ಪುತ್ರಿ ಸ್ಪರ್ಧೆ ಬಗ್ಗೆ ಸತೀಶ್ ಹೇಳಿದ್ದೇನು?: ಲೋಕಸಭೆ ಚುನಾವಣೆಗೆ ಇನ್ನು ಕೇವಲ 8 ತಿಂಗಳು ಮಾತ್ರ ಬಾಕಿಯಿದೆ. ಹೀಗಾಗಿ ತಯಾರಿ ಮಾಡಿಕೊಳ್ಳುತ್ತೇವೆ. ಆದರೆ ಬಜೆಟ್ ಅಧಿವೇಶನ ಮುಗಿದ ಬಳಿಕ ಅದಕ್ಕೆ ಹೆಚ್ಚಿನ ಗಮನ ಕೊಡುತ್ತೇವೆ ಎಂದ ಸತೀಶ್ ಜಾರಕಿಹೊಳಿ, ಪಕ್ಷ ಬಯಸಿದರೆ ನಿಮ್ಮ ಮಗಳು ಪ್ರಿಯಾಂಕಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಮೊದಲು ನಮ್ಮ ಶಾಸಕರಲ್ಲಿ ಹೊಂದಾಣಿಕೆ ಆಗಬೇಕು. ಒಮ್ಮತದ ಅಭಿಪ್ರಾಯ ಮೂಡಬೇಕು. ನಾವು ಹೇಳಿದ್ದನ್ನು ಪಕ್ಷ ಅಂತಿಮವಾಗಿ ಪರಿಗಣಿಸುತ್ತದೆ. ಆದರೆ, ಶಾಸಕರ ಜೊತೆಗೆ ಚರ್ಚಿಸಿದ ನಂತರವೇ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಟಿಕೆಟ್ ಪಟ್ಟಿಯಲ್ಲಿ ತಮ್ಮ ಪುತ್ರಿ ಹೆಸರು ಇರುತ್ತಾ ಎಂಬ ಬಗ್ಗೆ ಶಾಸಕರು, ಕಾರ್ಯಕರ್ತರ ನಿರ್ಧಾರದಂತೆ ಮುಂದಿನ ಹೆಜ್ಜೆ ಇಡುತ್ತೇವೆ ಎಂದರು.
Laxmi News 24×7