ಚಾಮರಾಜನಗರ: ಕರೊನಾ ಭೀತಿ ಹಿನ್ನೆಲೆಯಲ್ಲಿ ಜೂ.21ರವರೆಗೂ ಮಲೆ ಮಹದೇಶ್ವರ ದೇವಾಲಯಕ್ಕೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದ್ರೆ ಸಚಿವ ಕೆ.ಎಸ್. ಈಶ್ವರಪ್ಪ ಅವರ ನಿಯಮ ಉಲ್ಲಂಘಿಸಿ ಇಂದು ಬೆಳಗ್ಗೆ ದೇವರ ದರ್ಶನ ಪಡೆದುಕೊಂಡಿದ್ದಾರೆ.
ಕೋವಿಡ್19 ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಲೆ ಮಹದೇಶ್ವರ ದೇವಾಲಯಕ್ಕೆ ಜೂ.19ರಿಂದ 21ರವರೆಗೆ ಸಾರ್ವಜನಿಕರು ಹಾಗೂ ಭಕ್ತರಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಶುಕ್ರವಾರ ರಾತ್ರಿ ಮ.ಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದು, ಶನಿವಾರ ಮುಂಜಾನೆ ಸ್ಥಳೀಯ ಶಾಸಕರೊಂದಿಗೆ ಮಹದೇಶ್ವರ ಸ್ವಾಮಿ ದರ್ಶನ ಪಡೆದಿದ್ದು, ಇದರಿಂದ ಅಸಮಾಧಾನಗೊಂಡ ಭಕ್ತರು ಜನರಿಗೊಂದು- ಜನಪ್ರತಿನಿಧಿಗಳಿಗೊಂದು ಕಾನೂನು ಇದೆಯೇ ಎಂದು ಟೀಕಿಸಿದ್ದಾರೆ.
ಸಚಿವರ ಜತೆ ಹನೂರು ಶಾಸಕ ನರೇಂದ್ರ ಸೇರಿ ನಾಲ್ಕೈದು ಜನರು ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಸಚಿವರು ಮತ್ತು ಅವರ ಬೆಂಬಲಿಗರು ಮಾಸ್ಕ್ ಧರಿಸದೆ ನಿಯಮ ಉಲ್ಲಘಿಸಿದ್ದಾರೆ.
ಇನ್ನು ಈ ಹಿಂದೆಯೂ ಸಚಿವ ಕೆ.ಎಸ್. ಈಶ್ವರಪ್ಪ ನಿಯಮ ಉಲ್ಲಂಘಿ ರಾಘವೇಂದ್ರ ಸ್ವಾಮೀಜಿ ದರ್ಶನ ಪಡೆದುಕೊಂಡಿದ್ದರು.