ಹಾಸನ: ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನಾದ್ಯಂತ ಪ್ರಸಾರವಾಗಿರುವ ಈ ಮಾರಕ ರೋಗ ಮನುಕುಲಕ್ಕೆ ಕಂಟಕ ಪ್ರಾಯವಾಗಿದೆ. ಇದು ದಿನ ದಿನಕ್ಕೆ ಹೆಚ್ಚುತ್ತಿರುವುದು ಶೋಚನೀಯ ಪ್ರಸಂಗ ಎಂದು ಆತಂಕ ಹೊರಹಾಕಿದರು.
ಮನುಷ್ಯ ಸ್ವಾರ್ಥದಿಂದ ತಂದುಕೊಳ್ಳುತ್ತಿರುವ ಈ ರೋಗ ಕೇವಲ ಮನುಕುಲ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳ ಮೇಲೆ ಬರುವ ಅವಕಾಶವಿದೆ. ಆದರೂ ಇದು ವಿಶಾಲಬುದ್ಧಿಯಿಂದ ಹೋಗಿ ಮನುಷ್ಯರಿಂದಲೇ ಹುಷಾರಾಗುವ ಲಕ್ಷಣ ಇದೆ. ಈ ರೋಗ ತಡೆಯಲು ಸ್ವಚ್ಛತೆ ಬಹಳ ಮುಖ್ಯ. ನಮ್ಮಲ್ಲಿ ಅನೇಕ ಮದ್ದು, ಅನೇಕ ವೈದ್ಯರಿದ್ದಾರೆ. ಇದು ಯಾವುದೇ ಮಟ್ಟಕ್ಕೆ ಹೋದರೂ ಹೆದರುವ ಅವಶ್ಯಕತೆ ಇಲ್ಲ ಎಂದು ಶ್ರೀಗಳು ಧೈರ್ಯದ ಮಾತುಗಳನ್ನು ಹೇಳಿದ್ದಾರೆ.
ಇತ್ತೀಚೆಗೆ ಕೋಡಿಮಠದ ಒಬ್ಬ ಯುವಕನಿಗೆ ರೋಗ ಹರಡಿದೆ ಎಂಬ ಸುದ್ದಿ ನಾವು ಕೇಳಿದ್ದೇವೆ. ಆ ಯುವಕನ ಹೆಸರು ಶಾಸ್ತ್ರಿ ನಮ್ಮ ಮಠದ ಶಿಷ್ಯನೇ. ಇಲ್ಲೇ ಪಕ್ಕದ ಜಾವಗಲ್ ಗ್ರಾಮದವನು. ಆತ ಮಠದಲ್ಲಿ ಇಲ್ಲ. ಬೆಂಗಳೂರಿನಲ್ಲಿ ಇದ್ದು, ಹೋಮ, ಪೂಜೆ ಮಾಡುತ್ತಿದ್ದಾನೆ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಹಿಂದೆ ಕೊರೊನಾ ರೋಗದ ಬಗ್ಗೆ ಎಲ್ಲ ಹೇಳಿದ್ದೇವೆ. ಬರುವ ಹುಣ್ಣಿಮೆ ಕಳೆದ ತಕ್ಷಣ ಇದರ ಬಗ್ಗೆ ವಿಸ್ತಾರವಾಗಿ ಹೇಳುತ್ತೇನೆ ಎಂದು ತಿಳಿಸಿದರು.