ಹುಬ್ಬಳ್ಳಿ: ವಲಯ ವರ್ಗಾವಣೆ ನಡೆಸದಿರಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿರುವುದು ಬಹುತೇಕ ಶಿಕ್ಷಕರಲ್ಲಿ ನಿರಾಸೆ ಮೂಡಿಸಿದೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವರ್ಗಾವಣೆ ಆಗುವ ಅವರ ನಿರೀಕ್ಷೆ ಹುಸಿಯಾಗಿದೆ.
ಕರ್ನಾಟಕ ಶಿಕ್ಷಕರ ವರ್ಗಾವಣೆ ಮತ್ತು ನಿಯಂತ್ರಣ ಕಾಯ್ದೆ (ತಿದ್ದುಪಡಿ)-2022ರ ಪ್ರಕಾರ, ಹೆಚ್ಚುವರಿ ವರ್ಗಾವಣೆ ನಂತರದ ವರ್ಷದಲ್ಲಿ ವಲಯ (ಕಡ್ಡಾಯ) ವರ್ಗಾವಣೆ ಮಾಡಬೇಕು.
ಈ ಪ್ರಕ್ರಿಯೆಯಲ್ಲಿ 10 ವರ್ಷಕ್ಕೂ ಹೆಚ್ಚು ಸಮಯದಿಂದ ನಗರ ಪ್ರದೇಶದಲ್ಲಿ (ಎ-ವಲಯ) ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಗ್ರಾಮೀಣ (ಸಿ-ವಲಯ) ಪ್ರದೇಶಕ್ಕೆ, ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಕರನ್ನು ನಗರ ಪ್ರದೇಶಕ್ಕೆ ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು.
‘ರಾಜ್ಯದಲ್ಲಿ 5 ಲಕ್ಷ ಶಿಕ್ಷಕರಿದ್ದು, ಸುಮಾರು 4 ಲಕ್ಷ ಶಿಕ್ಷಕರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಾರೆ. ಅವರಲ್ಲಿ 10 ವರ್ಷ ಪೂರೈಸಿದ ಹಲವರು ನಗರ ಪ್ರದೇಶಕ್ಕೆ ವರ್ಗಾವಣೆ ಆಗುವ ನಿರೀಕ್ಷೆಯಲ್ಲಿದ್ದರು. ಕಳೆದ ವರ್ಷ ಹೆಚ್ಚುವರಿ ವರ್ಗಾವಣೆ ಆಗಿದ್ದಕ್ಕೆ, ಈ ವರ್ಷ ವಲಯ ವರ್ಗಾವಣೆ ಮಾಡಬೇಕಿತ್ತು’ ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಲೇಶ ನವುಲೆ ‘ತಿಳಿಸಿದರು.