ಬೆಂಗಳೂರು: ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 2024ರ ಡಿಸೆಂಬರ್ನಲ್ಲಿ ನಡೆದಿದ್ದ ಬಿ.ಇಡಿ 2 ಮತ್ತು 4ನೇ ಸೆಮಿಸ್ಟರ್ಗಳಿಗೆ ನಡೆಸಿದ ಪರೀಕ್ಷೆಗಳ ಫಲಿತಾಂಶವನ್ನು ಮುಂದಿನ ಒಂದು ತಿಂಗಳೊಳಗೆ ನೀಡುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಏಕವ್ಯಕ್ತಿ ಸತ್ಯಶೋಧನಾ ಸಮಿತಿಯು ಮಧ್ಯಂತರ ವರದಿ ನೀಡಿದೆ.
ಎರಡೂ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸೌಲಭ್ಯಗಳನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಿಸಿ ಫಲಿತಾಂಶ ನೀಡಲು ಸೂಚಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಆರೋಪಿತ ಸಿಬ್ಬಂದಿಯ ಒಳಗೊಳ್ಳುವಿಕೆ ಇರಬಾರದು. ಮಧ್ಯಂತರ ವರದಿಯ ಶಿಾರಸುಗಳನ್ನು ಪಾಲಿಸುವ ಮೂಲಕ ಮತ್ತು ಒಂದು ತಿಂಗಳೊಳಗೆ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತು ಫಲಿತಾಂಶವನ್ನು ಪ್ರಕಟಿಸಲು ನಿರ್ದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಅಂಕಪಟ್ಟಿ ತಿರುಚಿದ ಆರೋಪ:
ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾಲಯದ 2024ರ ಡಿಸೆಂಬರ್ನಲ್ಲಿ ಬಿ.ಇಡಿ 2 ಮತ್ತು 4ನೇ ಸೆಮಿಸ್ಟರ್ಗಳಿಗೆ ನಡೆಸಿದ ಪರೀಕ್ಷೆಗಳ ಅಂಕಗಳನ್ನು ಅಕ್ರಮವಾಗಿ ತಿರುಚಲಾಗಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ತನಿಖೆ ಮಾಡಬೇಕೆಂಬ ಆಗ್ರಹವಿತ್ತು.
2021 ರಿಂದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ನೀಡದಿರುವುದು, ಅಂಕಪಟ್ಟಿ ಮುದ್ರಣದಲ್ಲಿ ನಿಯಮಗಳ ಉಲ್ಲಂಘನೆ, ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವನ್ನುಂಟುಮಾಡಲಾಗಿದೆ ಎಂದು ಗುಲ್ಬರ್ಗಾ ವಿವಿ ಮಾಜಿ ಕುಲಪತಿ, ಕುಲಸಚಿವರು ಮತ್ತು ಕುಲಸಚಿವರು (ಮೌಲ್ಯಮಾಪನ) ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ದೂರುಗಳು ಬಂದಿವೆ.
ಇದರ ಜತೆಗೆ ಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಅಂಕಪಟ್ಟಿಗಳನ್ನು ವಿತರಿಸದಿರುವ ಬಗ್ಗೆ ಪತ್ರಿಕೆಗಳು ಮತ್ತು ಮಾಧ್ಯಮ ವರದಿಗಳನ್ನು ಪರಿಗಣಿಸಲಾಗಿದೆ. ಈ ಸಂಬಂಧ ರಾಜ್ಯಪಾಲರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದೂರ್ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿದ್ದರು. ಸಮಿತಿಯು ಮಧ್ಯಂತರ ವರದಿ ನೀಡಿದೆ.
ತುಮಕೂರು ವಿವಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಕೆಎಸ್ಒಯು ಮತ್ತು ಕುವೆಂಪು ವಿವಿಗಳ ಆರೋಪಗಳು ಕೂಡ ತನಿಖಾ ಹಂತದಲ್ಲಿವೆ.
Laxmi News 24×7