ಬಾಗಲಕೋಟೆ: ಇತಿಹಾಸ ಮರುಕಳಿಸುತ್ತದೆ ಎಂಬುದನ್ನು ಕೊನೆಗೂ ಭಕ್ತರು ಸಾಬೀತುಪಡಿಸಿದ್ದಾರೆ. ಇತಿಹಾಸದಲ್ಲಿ ಎಂದೂ ರದ್ದಾಗದ ರಥೋತ್ಸವವನ್ನು ಈ ಸಲವೂ ನಡೆಸುವ ಮೂಲಕ ಇದು ಚರಿತ್ರೆ ಸೃಷ್ಟಿಸೋ ಅವತಾರ ಎಂದು ಸಾರಿದ್ದಾರೆ.
ತಡೆಯಲು ನಿಂತ ಪೊಲೀಸರು ಕೊನೆಗೂ ಸಾಲು ಸಾಲು ಎತ್ತಿನ ಬಂಡಿಗೆ, ಸಹಸ್ರಾರು ಭಕ್ತರ ದಂಡಿಗೆ ದಂಗಾಗಿ ಪಕ್ಕಕ್ಕೆ ಸರಿದು ದಾರಿ ಬಿಟ್ಟಿದ್ದಾರೆ.
ಪೊಲೀಸರ ಸರ್ಪಗಾವಲನ್ನೂ ದಾಟಿ ನುಗ್ಗಿದ ಭಕ್ತರು ಕೊನೆಗೂ ತೇರನ್ನು ಎಳೆದಿದ್ದಾರೆ.
ಹೌದು.. ಕರೊನಾತಂಕ, ಕೋವಿಡ್ ನಿರ್ಬಂಧದ ನಡುವೆಯೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿಯಲ್ಲಿ ರಥೋತ್ಸವ ಭರ್ಜರಿಯಾಗಿ ನೆರವೇರಿದೆ. ಕರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಥೋತ್ಸವವನ್ನು ರದ್ದುಗೊಳಿಸಿದ್ದರೂ ಸಾವಿರಾರು ಭಕ್ತರು ಜಮಾಯಿಸಿ ತೇರನ್ನು ಎಳೆದೇ ಬಿಟ್ಟಿದ್ದಾರೆ.ಭಕ್ತರನ್ನು ತಡೆಯಲು ಪೊಲೀಸರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.