ಬೆಳಗಾವಿ: ಮಹಾನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪಾಲಿಕೆ ಅಧಿಕಾರಿ, ಸಿಬ್ಬಂದಿ ರಸ್ತೆ ಮೇಲೆ ಕಸ ಎಸೆಯುವವರಿಗೆ, ಹಸಿ ಮತ್ತು ಒಣ ತ್ಯಾಜ್ಯ ವಿಲೇವಾರಿ ಮಾಡದವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಪಾಲಿಕೆ 58 ವಾರ್ಡ್ಗಳ ವ್ಯಾಪ್ತಿಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕಸ ಸಂಗ್ರಹಿಸುತ್ತಿರುವ ಸಂದರ್ಭದಲ್ಲಿ ನಿವಾಸಿಗಳು, ಹೋಟೆಲ್, ಅಂಗಡಿಕಾರರು ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ನೀಡದಿರುವ ಮತ್ತು ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಕಸ ಎಸೆಯುತ್ತಿರುವವರಿಗೆ ತಲಾ 500 ದಿಂದ 2,000 ರೂ. ವರೆಗೆ 25ಕ್ಕೂ ಅಧಿಕ ಜನರಿಗೆ ದಂಡ ವಿಧಿಸಲಾಗಿದೆ.
ಒಂದೇ ವಾರದಲ್ಲಿ ದಂಡದ ರೂಪದಲ್ಲಿ 1.50 ಲಕ್ಷ ರೂ. ವಸೂಲಿ ಮಾಡಿ ಎಚ್ಚರಿಕೆ ನೋಟಿಸ್ ನೀಡಲಾಗಿದೆ. ರಸ್ತೆ ಬದಿ, ಚರಂಡಿಯಲ್ಲಿ ಕಸ ಎಸೆಯುವವನ್ನು ಪತ್ತೆ ಹಚ್ಚಿ ಬಿಸಿ ಮುಟ್ಟಿಸಲಾಗಿದೆ. ನಿಯಮ ಉಲ್ಲಂಘಿಸಿರುವ ಕೆಲ ಹೋಟೆಲ್ ಪರವಾನಗಿ ರದ್ದುಪಡಿಸಲು ಕ್ರಮ ವಹಿಸಲಾಗಿದೆ. ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಕೊಟ್ಟರೆ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ಹಣ ಉಳಿತಾಯವಾಗುತ್ತದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿ ಹಣಮಂತ ಕಲಾದಗಿ ತಿಳಿಸಿದ್ದಾರೆ.
Laxmi News 24×7