ಆಸ್ತಿಗಾಗಿ ಕಂದಮ್ಮನನ್ನೇ ಬಲಿಪಡೆದ ಕ್ರೂರದೊಡ್ಡಪ್ಪನಿಗೆ ಬೆಳಗಾವಿ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. ಪುಟ್ಟ ಮಕ್ಕಳ ಸಾಕ್ಷ್ಯವನ್ನೇ ಪ್ರಮುಖವಾಗಿ ಪರಿಗಣಿಸಿದ ನ್ಯಾಯಾಧೀಶರು, ಹಂತಕನಿಗೆ ಸಾಯುವವರೆಗೂ ಕಂಬಿ ಎಣಿಸುವಂತೆ ಆದೇಶ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ 2021ರಲ್ಲಿ ನಡೆದಿದ್ದ ಸಿದ್ಧಾರ್ಥ್ ಸಂಕನ್ನವರ ಎಂಬ ಆರು ವರ್ಷದ ಮಗುವಿನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ತನ್ನ ತಮ್ಮ ವಿರೇಶ್ ಜೊತೆಗಿನ ಆಸ್ತಿ ಕಿತ್ತಾಟದ ಹಗೆತನವನ್ನು ಮಗುವಿನ ಮೇಲೆ ತೀರಿಸಿಕೊಂಡಿದ್ದ ಹಂತಕ ಈರಪ್ಪ ಸಂಕನ್ನವರನಿಗೆ ನ್ಯಾಯಾಧೀಶರಾದ ಮಂಜುನಾಥ ನಾಯಕ ಅವರು ಜೀವಾವಧಿ ಶಿಕ್ಷೆ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಮಗುವನ್ನು ಕುಡಗೋಲಿನಿಂದ ಐದಾರು ಬಾರಿ ಕೊಚ್ಚಿ ಕೊಲೆ ಮಾಡಿದ್ದಲ್ಲದೆ, ಮತ್ತೊಂದು ಮಗುವಿನ ಕೊಲೆಗೆ ಯತ್ನಿಸಿದ್ದ ಈರಪ್ಪನ ಕೃತ್ಯ ಸಮಾಜವನ್ನೇ ಬೆಚ್ಚಿಬೀಳಿಸಿತ್ತು.
ಈ ಪ್ರಕರಣದಲ್ಲಿ ಮೂವರು ಪುಟ್ಟ ಮಕ್ಕಳ ಸಾಕ್ಷ್ಯವು ಅತ್ಯಂತ ನಿರ್ಣಾಯಕವಾಯಿತು. ಕಿಂಚಿತ್ತೂ ಭಯಪಡದ ಮಕ್ಕಳು ನ್ಯಾಯಾಧೀಶರ ಮುಂದೆ ತಾವು ಕಂಡ ನೈಜ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಸರ್ಕಾರಿ ಅಭಿಯೋಜಕ ನಾರಾಯಣ ಆರಿ ಅವರ ಸಮರ್ಥ ವಾದ ಹಾಗೂ ಪೊಲೀಸ್ ಇಲಾಖೆ ಸಲ್ಲಿಸಿದ ಪಕ್ಕಾ ಸಾಕ್ಷ್ಯಾಧಾರಗಳನ್ನು ಪುರಸ್ಕರಿಸಿದ ನ್ಯಾಯಾಲಯ, ಹಂತಕನಿಗೆ ಕಠಿಣ ಶಿಕ್ಷೆ ವಿಧಿಸಿದೆ. ದಂಡದ ಮೊತ್ತದಲ್ಲಿ 25 ಸಾವಿರ ರೂಪಾಯಿಯನ್ನು ಮಗುವಿನ ತಂದೆಗೆ ನೀಡುವಂತೆ ನ್ಯಾಯಾಲಯ ಸೂಚಿಸಿದ್ದು, ಈ ತೀರ್ಪು ಮಕ್ಕಳ ಸಾಕ್ಷ್ಯದ ಬಲಕ್ಕೆ ಸಂದ ಜಯವಾಗಿದೆ.
Laxmi News 24×7