ಬೆಂಗಳೂರು: ರಾಜ್ಯದಲ್ಲೂ ಕಾಂಗ್ರೆಸ್ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಗುಜರಾತ್ ಫಲಿತಾಂಶದ ನಂತರ ದೇಶದಲ್ಲಿ ಡಬಲ್ ಎಂಜಿನ್ ಸರ್ಕಾರ ಇರಬೇಕೆಂಬ ವಿಚಾರಕ್ಕೆ ಮತದಾರರು ಮುದ್ರೆ ಒತ್ತಿದ್ದಾರೆ.
ಕರ್ನಾಟಕದಲ್ಲೂ ಅದೇ ಫಲಿತಾಂಶ ಮರುಕಳಿಸಲಿದೆ ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಹೆಸರು ಹೇಳುವವರು ಇರುವುದಿಲ್ಲ. ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ಗಾಂಧಿ ಗಡ್ಡ ಬೆಳೆದಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ ಎಂದು ಲೇವಡಿ ಮಾಡಿದರು.
ಭಾರತ್ ಜೋಡೋ ಕಾಂಗ್ರೆಸ್ ಚೋಡೋ ಯಾತ್ರೆಯಾಗಿ ಪರಿವರ್ತನೆಯಾಗಿದೆ. ಸೋನಿಯಾಗಾಂಧಿ ಅವರಿಗೆ ಅವರದೇ ಆದ ಸಮಸ್ಯೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಯಸ್ಸಾಗಿದ್ದು ಹೆಸರಿಗೆ ಕೂರಿಸಿದ್ದಾರೆ. ರಾಹುಲ್ಗಾಂಧಿಯೂ ಬಲವಂತಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.